ಬಂಟ್ವಾಳ, ನ.೧೯: ಕಳೆದ ಮೂರು ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಕೋಮುದ್ವೇಷದ ಅಹಿತಕರ ಘಟನೆಗಳಿಂದ ಬಿ.ಸಿ.ರೋಡ್ ಸುತ್ತಮುತ್ತಲಿನ ಪ್ರದೇಶ ಬೂದಿ ಮುಚ್ಚಿದ ಕೆಂಡದಂತಾಗಿದೆ.
ಸಂಜೆ ಬಳಿಕ ಬಿ.ಸಿ.ರೋಡ್ ಸುತ್ತಮುತ್ತ ಕಿಡಿಗೇಡಿಗಳು ನಡೆಸುತ್ತಿರುವ ಕೃತ್ಯಗಳಿಂದಾಗಿ ಜನತೆ ಆತಂಕಿತರಾಗಿದ್ದಾರೆ. ಬುಧವಾರ ರಾತ್ರಿ ಮೊಡಂಕಾಪು ಸಮೀಪದ ಪಲ್ಲಮಜಲಿನಲ್ಲಿ ಮಸೀದಿ, ಮನೆಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ಘಟನೆಗೆ ಸಂಬಂಧಿಸಿ ಬಂಟ್ವಾಳ ನಗರ ಠಾಣೆಯಲ್ಲಿ 3 ಪ್ರತ್ಯೇಕ ಪ್ರಕರಣಗಳು ದಾಖಲಾಗಿತ್ತು. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪುತ್ತೂರು ಎಎಸ್ಪಿ ಡಾ.ಚಂದ್ರಗುಪ್ತ, ವೃತ್ತ ನಿರೀಕ್ಷಕ ನಂಜುಡೇ ಗೌಡ ನೇತೃತ್ವದ ಪೊಲೀಸರು ಇತ್ತಂಡಗಳ 15ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ಪಣ್, ಅರುಣ್, ಬೇಬಿ, ಶಿವರಾಮ, ರಾಧಾಕೃಷ್ಣ, ಪ್ರಕಾಶ್, ನನ್, ಸುರೇಂದ್ರ, ಸಂತು, ಹರೀಶ್, ನರೇಶ್ ಹಾಗೂ ಇನ್ನೊಂದು ಪ್ರಕರಣದಲ್ಲಿ ಮುಹಮ್ಮದ್ ಹನೀಫ್, ಸಾದಿಕ್, ಮುಹಮ್ಮದ್, ಶರೀಫ್ ಇಸ್ಹಾಕ್ ಮತ್ತು ರಿಯಾಝ್ ಎಂಬವರನ್ನು ಬಂಧಿಸಿದ್ದು, ಗುರುವಾರ ಸಂಜೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ರಾತ್ರಿ 8 ಗಂಟೆಗೆ ಅಂಗಡಿ ಮುಚ್ಚಲು ಆದೇಶ: ಬಿ.ಸಿ.ರೋಡ್ ಆಸುಪಾಸಿನ ಪರಿಸರದಲ್ಲಿ ಮರುಕಳಿಸುತ್ತಿರುವ ಅಹಿತಕರ ಘಟನೆಗಳನ್ನು ಪರಿಗಣಿಸಿ ಮುನ್ನೆಚ್ಚರಿಕೆ ಕ್ರಮವಾಗಿ ಬಿ.ಸಿ.ರೋಡ್ನ ಎಲ್ಲಾ ಅಂಗಡಿಗಳನ್ನು ರಾತ್ರಿ ೮ ಗಂಟೆಗೆ ಮುಚ್ಚುವಂತೆ ಪುತ್ತೂರು ಎಎಸ್ಪಿ ಡಾ.ಚಂದ್ರಗುಪ್ತ ಆದೇಶಿಸಿದ್ದಾರೆ.
ಔಷಧಿ ಹಾಗೂ ಅಗತ್ಯ ವಹಿವಾಟುಗಳಿಗೆ ವಿನಾಯಿತಿ ನೀಡಲಾಗಿದ್ದು, ಉದ್ವಿಗ್ನ ಸ್ಥಿತಿಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಈ ಕ್ರಮ ಜರಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಿ.ಸಿ.ರೋಡ್: ಹೆಚ್ಚುವರಿ ಪೊಲೀಸ್ ನಿಯೋಜನೆ
ಮಂಗಳೂರು: ಬಿ.ಸಿ.ರೋಡ್ ಪರಿಸರದಲ್ಲಿ ಕಳೆದ ಎರಡು ದಿನಗಳಿಂದ ನಡೆದಿರುವ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಪತ್ರಿಕೆಗೆ ತಿಳಿಸಿದ್ದಾರೆ.
ಬಿ.ಸಿ.ರೋಡಿನಲ್ಲಿ ಪರಿಸ್ಥಿತಿ ನಿಯಂತ್ರಣ ದಲ್ಲಿದ್ದು, ಇದುವರೆಗೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ